ಸಾಲಿಗ್ರಾಮ(ಸಂಘಟನೆ ಮಂಜುನಾಥ್): ತಂದ್ರೆ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿದ್ದ ಟಿ.ಎಂ.ಮಹದೇವ ಅವರು ನರೇಗಾ ಯೋಜನೆಯಡಿ ಅಕ್ರಮ ಎಸಗಿದ್ದಾರೆ. ಕಾಮಗಾರಿ ಆಗದೇ ಇದ್ದರೂ ಬಿಲ್ ನೀಡ ಲಾಗಿದೆ. ಈ ಸಂಬಂಧ ಪಿಡಿಒ ಅಮಾನತು ಮಾಡುವುದಕ್ಕೆ ಬದಲಾಗಿ ವರ್ಗಾವಣೆ ಮಾಡಿ ದ್ದಾರೆ ಎಂದು ಅಂಕನಹಳ್ಳಿ ಗ್ರಾಮದ ಕೀರ್ತಿ ಮತ್ತು ಕುಪ್ಪಳ್ಳಿ ಮಹದೇವಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ಕೈಗೊಳ್ಳದ ಹಲವು ಕಾಮಗಾರಿಗಳಿಗೆ ಬಿಲ್ ಮಾಡಲಾಗಿದೆ. ಕೆಲವರ ಜಮೀನಿನಲ್ಲಿ ಯಾವುದೇ ಕಾಮಗಾರಿ ಮಾಡದಿದ್ದರೂ, ನರೇಗಾ ಯೋಜನೆಯಡಿ ರಸ್ತೆ ಕಾಮಗಾರಿ ಮಾಡಿದೆ ಎಂದು ದಾಖಲಿಸಿ ಹಣ ಪಡೆಯಲಾಗಿದೆ. ಇದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಈಗಾಗಲೇ ತಾಪಂ, ಜಿಪಂಗೆ ನೀಡಿದ್ದೇವೆ ಎಂದು ತಿಳಿಸಿದರು.

ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದರೆ ಸರಿಯಾಗಿ ಉತ್ತರ ನೀಡದೇ, ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದೀರಿ ಎಂದು ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಬೆದರಿಕೆ ಹಾಕಿರುವ ಘಟನೆಗಳು ಸಾಕಷ್ಟಿವೆ. ಇದರಿಂದ ಸದಸ್ಯರಿಗೆ ಸಾಕಷ್ಟು ನೋವು ಉಂಟಾಗಿದೆ. ಇದರ ಬಗ್ಗೆ ತನಿಖೆ ಮಾಡಿ ಅವರನ್ನು ಅಮಾನತು ಮಾಡಿ ಎಂದರೆ ಈಗ ವರ್ಗಾವಣೆ ಮಾಡಿದ್ದಾರೆ. ಆದರೆ ಮಾಡಿರುವ ತಪ್ಪಿಗೆ ಯಾರು ಹೊಣೆ? ತನಿಖೆ ಮಾಡಿ ಶಿಸ್ತು ಕ್ರಮ ಆಗಬೇಕು ಎಂದು ಈಗಾಗಲೇ ಲೋಕಾಯುಕ್ತ ಪೊಲೀಸರಿಗೂ ದೂರು ನೀಡಿದ್ದೇವೆ. ಆದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇವರ ಜತೆ ಸಾಲಿಗ್ರಾಮ ಇಒ ರವಿಕುಮಾರ್ ಅವರು ಶಾಮೀಲಾಗಿರಹುದು ಎಂಬ ಅನುಮಾನ ಇದೆ. ನಾವು ಕೊಟ್ಟಿರುವ ದೂರಿನ ಮೇಲೆ ಇವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇವರಿಬ್ಬರ ವಿರುದ್ಧ ಜಿಪಂ ಸಿಇಒ ಮತ್ತು ಮುಖ್ಯಮಂತ್ರಿ ಮುಖ್ಯ ಕಾರ್ಯದರ್ಶಿಗಳಿಗೂ ದೂರು ನೀಡಿದ್ದೇವೆ. ಆದರೂ ನಮ್ಮ ದೂರಿಗೆ ಉತ್ತರ ಸಿಕ್ಕಿಲ್ಲ. ಹೀಗೇ ಆದರೆ ಜಿಪಂ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.








